ಸಂಕ್ರಾಂತಿ ಹಬ್ಬವನ್ನು ಆಚರಿಸೋದು ಏಕೆ?, ಈ ಹಬ್ಬದ ವಿಶೇಷತೆಗಳೇನು,
ವೈಜ್ಞಾನಿಕವಾಗಿ ಇರುವ ಕಾರಣಗಳೇನು ?
ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತಾದರೂ ವೇದಾಂಗ ಜ್ಯೋತಿಷ್ಯ ಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ..
ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಲ್ಲಿ ಸಂಕ್ರಾಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತೆ...ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನು ಮಕರರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ 14ರ ಸುಮಾರಿಗೆ ಬೀಳುತ್ತದೆ. ಇದನ್ನು ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭ ಎಂದೂ ಕರೆಯಲಾಗುತ್ತದೆ.
ಸಂಕ್ರಾಂತಿ ದಿನದ ಬಗ್ಗೆ ಖಗೋಳ ಶಾಸ್ತ್ರ ಏನು ಹೇಳುತ್ತೆ?
ಖಗೋಳ ಶಾಸ್ತ್ರದ ಪ್ರಕಾರ ಸಂಕ್ರಾಂತಿ ದಿನಕ್ಕೆ ಬಹಳ ವೈಜ್ಞಾನಿಕವಾದ ವಿವರಣೆ ಇದೆ... ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ 12ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ.
ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು. ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ ಅಂದರೆ ಉತ್ತರಕ್ಕೆ ಅಥವಾ ಎಡಕ್ಕೆ ಅಂದರೆ ದಕ್ಷಿಣಕ್ಕೆ ಆಗುತ್ತದೆ. ಚಳಿಗಾಲ ಅಂದರೆ ಇರುಳಿನ ಪ್ರಮಾಣ ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ.
ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ.
ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. ಸುಮಾರು ಡಿಸೆಂಬರ್ 22 ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.
ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ದಿಯನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ.
ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಣಯಾನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. ಸುಮಾರು ಜೂನ್ 21 ಈ ದಿನ. ಇಷ್ಟೆಲ್ಲಾ ವಿವರಣೆ ಅನ್ವಯಿಸುವುದು ಭೂಮಂಡಲದ ಭೂಮಧ್ಯರೇಖೆಯ ಉತ್ತರಾರ್ಧ. ಇದೇ ರೀತಿಯ ಆದರೆ ತದ್ವಿರುದ್ಧವಾದ ವಿವರಣೆ ದಕ್ಷಿಣಾರ್ಧಕ್ಕೆ ಅನ್ವಯಿಸುತ್ತದೆ.
ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ ಅಂದರೆ ಆಕ್ಸಿಸ್ ಸುಮಾರು 22 1/2 ಡಿಗ್ರಿ ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನವೂ ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು '8'ರ ಆಕೃತಿಯಲ್ಲಿ ಕಾಣುತ್ತವೆ.
ಸಂಕ್ರಾಂತಿಯನ್ನು ಎಲ್ಲೆಲ್ಲಿ ಹೇಗೆ ಆಚರಿಸುತ್ತಾರೆ ಗೊತ್ತಾ?
ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲವನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.
ಎಳ್ಳು ಬೆಲ್ಲ ಬೀರುವುದೇಕೆ ಗೊತ್ತಾ?
ಸಂಕ್ರಾಂತಿ ದಿನ ಎಳ್ಳು ಬೀರುವುದರ ಹಿಂದೆ ವೈಜ್ಞಾನಿಕವಾದ ಕಾರಣವಿದೆ. ಸಂಕ್ರಾಂತಿ ಸಮಯದಲ್ಲಿ ಚಳಿ ಹೆಚ್ಚಿರುವುದರಿಂದ ದೇಹವನ್ನು ಬೆಚ್ಚಗಿರಿಸಲು ಎಳ್ಳು ಸಹಕಾರಿಯಾಗುತ್ತದೆ. ಅಲ್ಲದೆ ಎಳ್ಳು ಮತ್ತು ಬೆಲ್ಲ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇನ್ನು ಕೊಬ್ಬರಿ, ಹುರಿಗಡಲೆ ಚರ್ಮದ ಆರೋಗ್ಯ ಕಾಪಾಡುತ್ತವೆ. ಹೀಗಾಗಿ ಎಲ್ಲರೂ ಎಳ್ಳು ಬೆಲ್ಲ ಬೀರುತ್ತಾರೆ...
ಮಕರ ಸಂಕ್ರಾತಿ ದಿನದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನ, ಜನ್ಮ ಜನ್ಮದಲೂ ಸದಾ ನಮಗೆ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು - ಬೆಲ್ಲ ಹಂಚುವುದು ಎಂಬ ನಂಬಿಕೆ ಇದೆ.
ರೈತರಿಗೆ ಇದು ಸುಗ್ಗಿಯ ಹಬ್ಬ. ಈ ಮಂಗಳಕರ ದಿನದಂದು, ಹೆಣ್ಣುಮಕ್ಕಳು ಎಳ್ಳು ಬೀರಿ, "ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ" ಎಂದು ಹೇಳಿಕೊಳ್ಳುತ್ತಾರೆ.
ಕರ್ನಾಟಕದ ಕೆಲವು ಭಾಗಗಳಲ್ಲಿ, ಹೊಸದಾಗಿ ಮದುವೆಯಾದ ಮಹಿಳೆ ಯರು ತನ್ನ ಮದುವೆಯ ಮೊದಲ ವರ್ಷದಿಂದ ಐದು ವರ್ಷಗಳ ಕಾಲ ಬಾಳೆಹಣ್ಣುಗಳನ್ನು ಮುತ್ತೈದೆಯರಿಗೆ ಕೊಡುವ ಸಂಪ್ರದಾಯ ಇದೆ. ಬಾಳೆಹಣ್ಣುಗಳ ಸಂಖ್ಯೆಯನ್ನು ಪ್ರತಿವರ್ಷ ಐದರಿಂದ ಹೆಚ್ಚಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ, ಸಮುದಾಯದ ಸದಸ್ಯರೊಂದಿಗೆ ಗಾಳಿಪಟ ಹಾರಿಸುವ ಸಂಪ್ರದಾಯವಿದೆ.
ಮಹಿಳೆಯರು ಗುಂಪು ಗುಂಪಾಗಿ ರಂಗೋಲಿಯನ್ನು ಬಿಡಿಸುವುದು ಸಂಕ್ರಾಂತಿಯ ಸಮಯದ ಮತ್ತೊಂದು ಜನಪ್ರಿಯ ಘಟನೆ. ದನಕರುಗಳನ್ನು ಸಿಂಗರಿಸುವುದು ಮತ್ತು ಮೆರವಣಿಗೆ ಮಾಡುವುದು ಇನ್ನೊಂದು ಧಾರ್ಮಿಕ ಪದ್ಧತಿಯಾಗಿದೆ. ಅವುಗಳನ್ನು "ಕಿಚ್ಚು ಹಾಯಿಸುವುದು" ಹಳ್ಳಿಗಳಲ್ಲಿ ಸಾಮಾನ್ಯವಾಗಿದೆ.
ಇದೇ ರೀತಿಯಾಗಿ ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೆÇಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ ಮೊದಲ ದಿನ ಭೋಗಿ ಅಂದ್ರೆ ಹೊಸ ಬಟೆಗಳನ್ನು ತೊಡಲಾಗುತ್ತದೆ. ನಂತರ ಪೊಂಗಲ್. ಅಂದು ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲವನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ. ಆನಂತರ ಮಾಟ್ಟು ಪೊಂಗಲ್ ಅಂದರೆ ಗೋ ಪೂಜೆ ಮಾಡಲಾಗುತ್ತದೆ. ಕೆಲವು ಕಡೆ ಜಲ್ಲಿಕಟ್ಟು ಎಂಬ ಗೂಳಿಗಳನ್ನು ಪಳಗಿಸುವ ಆಟ ಸಹ ನಡೆಸಲಾಗುತ್ತದೆ. ಕೊನೆಯದಾಗಿ ಕಾಣುಮ್ ಪೊಂಗಲ್. ಕಾಣುಮ್ ಅಂದರೆ ನೋಡುವುದು ಇಲ್ಲವೇ ಕಾಣುವುದು. ಈ ದಿನದಂದು ಜನ ತಮ್ಮವರೊಂದಿಗೆ ಸಮಯ ಕಳೆಯುತ್ತಾರೆ. ಈ ದಿನದಂದು ಮದುವೆ ಮುಹೂರ್ತಗಳನ್ನೂ ಇಡಲಾಗುತ್ತದೆ.
ಆಂಧ್ರ ಪ್ರದೇಶದಲ್ಲೂ ಇದೇ ರೀತಿಯಾಗಿ ಆಚರಣೆ ನಡೆಸಲಾಗುತ್ತದೆ. ಕೇರಳದಲ್ಲಿ ಅಯ್ಯಪ್ಪ ಸ್ವಾಮಿಯ ಮಕರ ಜ್ಯೋತಿಯನ್ನು ಎಲ್ಲರೂ ನೋಡಿರುತ್ತೀರಿ...
ಇನ್ನು ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು. ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು. ಹೀಗೆ ಸಂಕ್ರಾಂತಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಾಗಿ ಆಚರಿಸುತ್ತಾರೆ...
Trends is an amazing magazine Blogger theme that is easy to customize and change to fit your needs.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ